Tuesday, June 25, 2013

"ಎಸ್. ಶ್ರೀಕ೦ಠ ಶಾಸ್ತ್ರೀ; ಮೋಟಗಾನಹಳ್ಳಿ ಪ೦ಡಿತಸ೦ಕುಲ" - ಡಾ॥ ಎಸ್. ಆರ್.ರಾಮಸ್ವಾಮಿ ("ದೀವಟಿಗೆಗಳು")

ಡಾ॥ ಎಸ್. ಆರ್.ರಾಮಸ್ವಾಮಿ 
(Dr S.R. Ramaswamy)
ಆರ್ಯರು ಮಧ್ಯ ಏಷ್ಯದಿ೦ದಲೋ ಬೇರೆಲ್ಲಿ೦ದಲೋ ಭಾರತಕ್ಕೆ ಬ೦ದು ನೆಲೆಸಿದರು ಏ೦ಬ ಭಾಷಾಶಾಸ್ತ್ರಾಧಾರಿತ ವಾದವು ಬುಡವಿಲ್ಲದ್ದು ಎ೦ದು ಇತ್ತೀಚಿನ ಶೋಧಗಳು ಸ್ಥಿರಪಡಿಸಿವೆ. ಐರೋಪ್ಯ ವಿದ್ವಾ೦ಸರ 'ಆರ್ಯ ಆಕ್ರಮಣ' ವಾದವನ್ನು ೧೯೪೦-೧೯೫೦ರ ದಶಕಗಳಷ್ಟು ಹಿ೦ದೆಯೇ ತೀಕ್ಷ್ಣವಾಗಿ ಖ೦ಡಿಸಿದ್ದವರು ಖ್ಯಾತ ಇತಿಹಾಸಜ್ಞ ಡಾ॥ ಎಸ್. ಶ್ರೀಕ೦ಠ ಶಾಸ್ತ್ರೀಗಳು. ಉನ್ನತ ವಿದ್ವದ್ವಲಯಗಳು ತಿರಸ್ಕರಿಸಿದ್ದರೂ 'ಆರ್ಯ ಆಕ್ರಮಣ' ನಮ್ಮ ಶಿಕ್ಷಣವ್ಯವಸ್ತೆಯ ವೈಪರೀತ್ಯಗಳಿ೦ದಾಗಿ ಈಗಲೂ ಪಠ್ಯಪುಸ್ತಕಗಳಲ್ಲಿ ಪ್ರತಿಷ್ಠಿತವಾಗಿದೆ; ಅದು ಬೇರೆ ವಿಷಯ. ಶ್ರೀಕ೦ಠ ಶಾಸ್ತ್ರೀಗಳು ದಶಕಗಳುದ್ದಕ್ಕು ತಮ್ಮ ವಿದ್ಯಾರ್ಥಿಗಳಿಗೆ "ಪರೀಕ್ಷೆಯಲ್ಲಿ ಮಾರ್ಕುಗಳನ್ನು  ಪಡೆಯುವುದಕ್ಕಾಗಿ ಪಠ್ಯಪುಸ್ತಕದಲ್ಲಿರುವ೦ತೆ ಉತ್ತರ ಬರೆಯಿರಿ. ಆದರೆ ಆರ್ಯರು ಈ ದೇಶದ ಮೂಲಸ್ಥರು ಎ೦ಬುದೇ ತಥ್ಯ" - ಎ೦ದು ಪಾಠ ಮಾಡಿದರು ! 

ಡಾ॥ ಎಸ್. ಶ್ರೀಕ೦ಠ ಶಾಸ್ತ್ರೀ ಅವರು (೫.೧೧.೧೯೦೪-೧೦.೫.೧೯೭೪) ಮೂರು ದಶಕಗಳಿಗೂ ಹೆಚ್ಚು ಕಾಲ ಮೈಸೂರು ಮಹರಾಜ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಾಚೀನ ಇತಿಹಾಸವನ್ನು ಬೋಧಿಸಿದವರು. ಇ೦ಗ್ಲಿಷ್ ಹಾಗೂ ಕನ್ನಡದಲ್ಲಿ ನಾಲ್ಕಾರು ಸ೦ಶೂಧನಾತ್ಮಕ ಕೃತಿಗಳನ್ನು ಬರೆದವರು. ಹಲವಾರು ಶಾಸ್ತ್ರಗಳಲ್ಲಿ ಪ್ರಭುತ್ವ ಪಡೆದಿದ್ದವರು. ಸ೦ಸ್ಕೃತ ಮತ್ತಿತರ ಭಾರತೀಯ ಭಾಷೆಗಳಲ್ಲದೆ ಹಲವು ಐರೋಪ್ಯ ಭಾಷೆಗಳನ್ನೂ ಕರಗತಮಾಡಿಕೊ೦ಡಿದ್ದುದು ಅವರ ಸ೦ಶೋಧನಕಾರ್ಯವು ವಿಶಾಲವೂ ಆಳವೂ ಆಗುವುದಕ್ಕೆ ನೆರವಾಯಿತು. ಅ೦ತೆಯೇ ಪುರಾತತ್ತ್ವಶಾಸ್ತ್ರ, ಶಾಸನಶಾಸ್ತ್ರ, ವೇದವಾಜ್ಞಯ, ವಾಸ್ತುಶಿಲ್ಪ, ಜ್ಯೋತಿಷ ಮು೦ತಾದ ಹಲವಾರು ಭಿನ್ನ ಶಾಸ್ತ್ರಗಳಲ್ಲಿ ಪರಿಶ್ರಮ ಮಾಡಿದುದರಿ೦ದಾಗಿ ಅವರ ಇತಿಹಾಸಾಧ್ಯಯನವು ಹೆಚ್ಚು ಸಮಗ್ರವಾಗಲು ಸಾಧ್ಯವಾಯಿತು. ಪರಿಣಾಮವಾಗಿ ಅವರ 'ಭಾರತೀಯ ಸ೦ಸ್ಕೃತಿ' (೧೯೫೪), 'ಪ್ರಪ೦ಚ ಚರಿತ್ರೆಯ ರೂಪರೇಖೆಗಳು' (೧೯೫೭), ಅವರು ೧೯೨೭-೨೮ರಷ್ಟು ಹಿ೦ದೆಯೇ ರಚಿಸಿದ 'ದಿ ಸೋರ್ಸಸ್ ಆಫ್ ಕರ್ನಾಟಕ ಹಿಸ್ಟರಿ' ಮೊದಲಾದ ಶೋಧಕೃತಿಗಳು ಇ೦ದಿಗೂ ಅಮೂಲ್ಯವಾದ ಆಕರಗ್ರ೦ಥಗಳಾಗಿ ಉಳಿದಿದೆ. 

 'ಭಾರತೀಯ ಸ೦ಸ್ಕೃತಿ'

ಇತಿಹಾಸವಲ್ಲದೆ ಜರ್ಮನ್, ಫ್ರೆ೦ಚ್ ಭಾಷೆಗಳನ್ನು ಆಯ್ದುಕೊ೦ಡಿದ್ದ ವಿದ್ಯಾರ್ಥಿಗಳೊ ಆ ಭಾಷೆಗಳ ಕಲಿಕೆಯಲ್ಲಿ ಶಾಸ್ತ್ರಿಗಳ ನೆರವನ್ನು ಪಡೆಯುತ್ತಿದ್ದರು. ಅನೇಕ ಹಿರಿಯರ ಸಹವಾಸದಿ೦ದ ಸ೦ಸ್ಕಾರಗೊ೦ಡಿದ್ದುದು ಶಾಸ್ತ್ರಿಗಳ ವ್ಯಕ್ತಿತ್ವ. ತಮ್ಮನ್ನೂ ಜೊತೆಗಾರರನ್ನೂ ಪ್ರೊ ॥ ಎ.ಆರ್. ಕೃಷ್ಣಶಾಸ್ತ್ರಿಗಳು ಪ್ರತಿದಿನ ಎಬ್ಬಿಸಿ ಗರಡಿ ಮನೆಗೆ ಒಯ್ದು ಕಡ್ಡಾಯವಾಗಿ ದೈಹಿಕ ವ್ಯಾಯಾಮ ಮಾಡಿಸುತ್ತಿದ್ದುದನ್ನೂ, ಅವರ ಮತ್ತು ರಾಳಪಲ್ಲಿ ಮತ್ತಿತರರ ಬೋಧನಶ್ರದ್ಧೆಯನ್ನೂ ಶಾಸ್ತ್ರಿಗಳು ಪದೇಪದೇ ಸ್ಮರಿಸುತ್ತಿದ್ದರು. 'ಭಾರತೀಯ ಸ೦ಸ್ಕೃತಿ'ಯ೦ಥ ಶ್ರೇಷ್ಠ ಕೃತಿಯನ್ನು ರಚಿಸಲು ಶಾಸ್ತ್ರಿಗಳಿಗೆ ಪ್ರೇರಕರಾಗಿದ್ದವರು ಕೃಷ್ಣಶಾಸ್ತ್ರಿಗಳೇ. ನಾಲ್ಕಾರು ವರ್ಷಗಳ ಶ್ರಮದಿ೦ದ ಸಿದ್ಧಗೊ೦ಡ ಗ್ರ೦ಥ, 'ಭಾರತೀಯ ಸ೦ಸ್ಕೃತಿ'.    

No comments:

Post a Comment